ರುಜುವಾತು
ಈವತ್ತಿನ ರಾಜಕಾರಣದಲ್ಲಿ ನಾನು ಮತ್ತು ನೀವು
ಇವತ್ತು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಹೇಗೆ ಸಾಧ್ಯವಾಯಿತು? ಈಗ ಬಿಜೆಪಿಯನ್ನು ವಿರೋಧಿಸುತ್ತ ಇರುವ ಶ್ರೀ ದೇವೇಗೌಡರೂ ಸೇರಿಕೊಂಡಂತೆ ಪಕ್ಷೇತರ ರಾಜಕೀಯ ಚಿಂತಕರಾಗಿ ಬಿಜೆಪಿಯನ್ನು ಅನೈತಿಕವೆಂದು ತಿಳಿಯುವ ನನ್ನಂಥವರ ಪಾಲೂ ಇದರಲ್ಲಿ ಎಷ್ಟು ಇದೆ ಎನ್ನುವುದನ್ನು ಸತ್ಯ ನಿಷ್ಠುರವಾಗಿ ನೋಡುವುದು ಈ ಲೇಖನದ ಉದ್ದೇಶ.
ನನಗೆ ನೆನಪಿದೆ: ಬಹಳ ಹಿಂದೆ ಲೋಹಿಯಾ ಹೇಳಿದ್ದ ಮಾತು: `ನಾನು ಪಾಕಿಸ್ತಾನದ ವಿರೋಧಿ; ಆದರೆ ಮುಸ್ಲಿಮರ ಸ್ನೇಹಿತ. ಆರ್.ಎಸ್.ಎಸ್ ಪಾಕಿಸ್ತಾನದ ಪರ; ಆದರೆ ಮುಸ್ಲಿಮರ ಶತ್ರು'. ಇಂತಹ ಜಾಣವೆಂದು ಕಾಣುವ ಲೋಹಿಯಾ ಮಾತುಗಳ ಹಿಂದೆ ಅವರು ನಂಬಿದ ತತ್ವ ಇತ್ತು. ಆರ್.ಎಸ್.ಎಸ್ ಮತ್ತು ಪಾಕಿಸ್ತಾನದ ನಾಯಕರು ಮತಾಧಾರಿತ ವ್ಯವಸ್ಥೆಯ ಅಧಿಕಾರದಲ್ಲಿ ನಂಬಿದವರು. ತಾತ್ವಿಕವಾಗಿ ಇಬ್ಬರ ನೆಲೆಯೂ ಒಂದೇ. ಆದರೆ ತಾನು ಮತಾಧಾರಿತ ವ್ಯವಸ್ಥೆಯ ವಿರೋಧಿ; ಅದು ಇಸ್ಲಾಂ ಪ್ರಣೀತವಿರಲಿ, ಹಿಂದೂ ಪ್ರಣಿತವಿರಲಿ- ಎರಡೂ ತನ್ನ ಪಾಲಿಗೆ ದುಷ್ಟ ವ್ಯವಸ್ಥೆಗಳೇ. ಲೋಹಿಯಾ ಕೊನೆತನಕ ಹೀಗೆ ನಂಬಿದ್ದವರು; ಆದರೆ ಸದ್ಯದಲ್ಲಿ ಸಲ್ಲುವ ತಂತ್ರಗಾರಿಕೆಯಲ್ಲಿ ಬಿಜೆಪಿ ಬೆಳೆಯಲೂ ಅಪ್ರತ್ಯಕ್ಷವಾಗಿ ಕಾರಣರಾದವರು. ಜಾರ್ಜ ಫರ್ನಾಂಡೀಸರ ಆಲೋಚನಾಕ್ರಮದಲ್ಲಿ, ಮನೋವಿಕಾರವೆನ್ನಿಸುವಷ್ಟು ತೀವ್ರವಾದ ನೆಹರೂ ಸಂತಾನದ ಅವರ ದ್ವೇಷದ ಹಿಂದೆ ಇಡಿಯಾದ ಲೋಹಿಯಾ ಇಲ್ಲದಿರಬಹುದು; ಆದರೆ ವ್ಯಂಗ್ಯಗೊಳಿಸಬಲ್ಲ ಲೋಹಿಯಾ ವಿಚಾರದ ಅಣಕು ಚಿತ್ರ ಜಾರ್ಜ್ ಫರ್ನಾಂಡೀಸರಲ್ಲಿ ಇದೆ. ನಾನು ಹಿಂದೆ ತುಂಬ ಮೆಚ್ಚಿದ್ದವರ ಬಗ್ಗೆ ಒಲ್ಲದ ಮನಸ್ಸಿನಿಂದ ಹೇಳುವ ಮಾತು ಇದು.
ಆದರೆ ತನ್ನ ನೆಹರೂ ವಿರೋಧದಲ್ಲಿ ಲೋಹಿಯಾ ಕಾಂಗ್ರೆಸ್ಗೆ ಒಂದು ಪ್ರತಿಪಕ್ಷ ಕಟ್ಟುವುದರಲ್ಲೂ ತೊಡಗಿದವರಾಗಿದ್ದರು. ಅವರ ಮೊದಲಿನ ಹಲವು ಪ್ರಯೋಗಗಳು ಭಾರತದಂತಹ ವಿಶಾಲವಾದ ದೇಶದಲ್ಲಿ ಕತ್ತಲನ್ನು ಅಲ್ಲಲ್ಲಿ ಬೆಳಗುವ ಮಿಣುಕುಹುಳಗಳಾಗಿ ಮಾತ್ರ ಗೋಚರಿಸಿದುವು. ಜನರ ಕಣ್ಣಿಗೆ ಕಾಂಗ್ರೆಸ್ ಒಂದು ಸ್ಥಿರವಾದ ಬದಲಾಗದ ಶಿಲೆಯಂತೆ ಕಾಣುವುದನ್ನು ತಪ್ಪಿಸುವುದು ಹೇಗೆ ಎಂಬ ಚಿಂತನೆಯಲ್ಲಿ ಲೋಹಿಯಾ ತೊಡಗಿದ್ದರು. ಹೀಗೆ ತೊಡಗಿದಾಗ ಅವರಿಗೆ ಸ್ಥೂಲವಾಗಿ ಅನಿಸಿದ್ದು ಹೀಗೆ: ಕಾಂಗ್ರೆಸ್ನಲ್ಲಿ ಎಲ್ಲ ಬಗೆಯ ವಿಚಾರದವರೂ ಇದ್ದಾರೆ. ಬಂಡವಾಳಶಾಹಿ ಪರವಾದವರು ಇದ್ದಾರೆ, ಸಮಾಜವಾದಿಗಳಿದ್ದಾರೆ, ಹಿಂದೂ ಮತೀಯವಾದಿಗಳಿದ್ದಾರೆ, ಹೀಗೆ ಕಾಂಗ್ರೆಸ್ ಎಲ್ಲವನ್ನೂ ಒಳಗೊಂಡ ಹಿಂದೂ ಧರ್ಮದ ಹಾಗೆಯೇ ಇದೆ. ಗಾಂಧೀಜಿಯವರು ಸಾಯುವ ಮುಂಚೆ ಈ ಕಾಂಗ್ರೆಸ್ಸನ್ನು ಬರಕಾಸ್ತುಗೊಳಿಸಿ; ಬೇರೆ ಬೇರೆ ರಾಜಕೀಯ ಪಕ್ಷಗಳು ತಾವಾಗಿಯೇ ಹುಟ್ಟಿಕೊಳ್ಳಲಿ; ಕಾಂಗ್ರೆಸ್ಸಿಗೆ ಈ ದೇಶವನ್ನು ಆಳುವ ಗೊಡವೆ ಬೇಡ; ಅದು ಉಳಿಯುವುದಾದರೆ ಸಮಾಜ ಸೇವಾ ಸಂಸ್ಥೆಯಾಗಿ ಉಳಿಯಲಿ ಎಂದು ತಮ್ಮ ವಿಲ್ನಲ್ಲಿ ಬರೆದಿಟ್ಟಿದ್ದರು. ಅದನ್ನು ಕಾಂಗ್ರೆಸ್ ಪಾಲಿಸಿದ್ದರೆ ಸ್ವಾತಂತ್ರ್ಯದ ನಂತರ ನೆಹರು ಅವರದ್ದೇ ಒಂದು ಸಮಾಜವಾದೀ ಚಿಂತನೆಯ ಪಕ್ಷ ; ಇರುವ ವ್ಯವಸ್ಥೆಯ ಮುಂದುವರಿಯಕೆಯಲ್ಲಿ ನಂಬಿಕೆ ಇರುವ ಸರದಾರ್ ಪಟೇಲ್, ಬಾಬೂ ರಾಜೇಂದ್ರ ಪ್ರಸಾದ್, ರಾಜಾಜಿಯಂಥವರದ್ದೇ ಒಂದು conservative ಪಕ್ಷ;ultra conservative ಆದ ಹಿಂದು ಸಾವರ್ಕರ್ ಪ್ರೇರಿತ ರಾಷ್ಟ್ರವಾದೀ ಪಕ್ಷವಾದ ಜನಸಂಘ-- ಇಂತಹ ಪಕ್ಷಗಳು ಹುಟ್ಟಿಕೊಂಡು, ಈ ಪಕ್ಷಗಳಲ್ಲಿ ಕಾಂಗ್ರೆಸ್ನವರು ತಮ್ಮ ವಿಚಾರಕ್ಕೆ ತಕ್ಕಂತೆ ಹಂಚಿಕೊಂಡು, ಭಾರತೀಯ ಪ್ರಜಾತಂತ್ರ ವ್ಯವಸ್ಥೆ ಈಗಿನ ಗೊಂದಲವಿಲ್ಲದೆ ಬೆಳೆಯುತ್ತಿತ್ತೇನೋ? read more »
ಪೊನ್ನಮ್ಮಾಳ್ ಎಂಬ ಸಮಾಜವಾದೀ ದೇವತೆ
ಶಿವಮೊಗ್ಗದ ಸಮಾಜವಾದೀ ಕುಟುಂಬದಲ್ಲಿ ಕೆಲವರಿಗೆ ಅಕ್ಕನಂತೆಯೂ ನಮ್ಮಂಥ ಎಳೆಯರಿಗೆ ತಾಯಿಯಂತೆಯೂ ಇದ್ದ ಪೊನ್ನಮ್ಮಾಳ್ ನಿಧನ ನನ್ನ ಮಟ್ಟಿಗೆ ಅತೀವ ದುಃಖದ ಸಂಗತಿ.
ನಮ್ಮ ಎಲ್ಲ ಚಳವಳಿಗಳಲ್ಲೂ ಭಾಗವಹಿಸುತ್ತಿದ್ದ ಮೊದಲನೇ ಮಹಿಳೆಯೆಂದರೆ ಪೊನ್ನಮ್ಮಾಳ್. ಚಳವಳಿಗಳಲ್ಲಿ ಮಾತ್ರವಲ್ಲ ನಮ್ಮ ಗಾಢವಾದ ತಾತ್ವಿಕ ಚರ್ಚೆಯಲ್ಲೂ ಅವರು ಪಾಲುದಾರರು. ಆದರೆ ಸ್ವಂತದ್ದಾದ ಯಾವ ರಾಜಕೀಯ ಆಸೆಯೂ ಅವರಿಗಿರಲಿಲ್ಲ. ಕನ್ನಡದ ಅನೇಕ ಮಹತ್ವದ ಲೇಖಕರಂತೆಯೇ ಪೊನ್ನಮ್ಮಾಳ್ ಮನೆಯಲ್ಲಿ ಕನ್ನಡ ಮಾತನಾಡದಿದ್ದರೂ ಸಂಪೂರ್ಣ ಕನ್ನಡಿಗರೇ ಆಗಿದ್ದವರು. ನಮಗೆ ಯಾರು ಯಾವ ಜಾತಿ ಇತ್ಯಾದಿ ಕುತೂಹಲಗಳೂ ಇಲ್ಲದಿದ್ದಾಲದಲ್ಲಿ ಪೊನ್ನಮ್ಮಾಳ್ ನಮ್ಮವರಾದರು. read more »
