ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ

ಕೂಗು

Syndicate content
ಎನ್ನ ಮನುಕುಲಕೆ!!!
URL: http://koogu.blogspot.com/
Updated: 3 hours 22 min ago

ಮತ್ತೆ ಬರುವನು ಚಂದಿರ - 1

Thu, 2008-09-04 11:50
ಕೂಡಿ, ಕಳೆವ ಆಟ ತರವೆ
ತಂದ ಗಂಟು ಮರೆತು ಬಿಡುವೆ
ಬೇಡ ಆಸೆ ಬೆಟ್ಟದಷ್ಟು
ಏರಲಾರೆ ಚಂದಿರ

ಸಾಕು ದಿನಕೆ ಮೂರು ತುತ್ತು
ಮಾತೆ ಕೊಟ್ಟ ಹತ್ತು ಮುತ್ತು
ಉಳಿದುದೆಲ್ಲ ಊರು ಪಾಲು
ನಮ್ಮ ಪಾಲಿಗಿರುವ ಚಂದಿರ

ಕತ್ತಲಿರುವ ಜಾಗದಲ್ಲಿ
ಹಣತೆ ಬೆಳಗಿ ಆಪ್ತನಾಗು
ಬಳಲಿ ಬಂದ ಬಂಧುಗಳಿಗೆ
ಬದುಕು ನೀಡು ಚಂದಿರ

ಸ್ವಚ್ಛ ಮನಕೆ ಶ್ವೇತ ವರ್ಣ
ಒಳಗಡಗಿದೆ ಏಳು ಬಣ್ಣ
ಬಿಗಿದಿಡುವ ಬಯಕೆ ತರವೆ
ಬೆಳಗುತಿರುವ ಚಂದಿರ

ಕುತೂಹಲ ಕೆರಳಿದಾಕ್ಷಣ
ಕುಂತಿಗಾಗ ಚಿರಯೌವನ
ದಾನ ವೀರ ಶೂರ ಕರ್ಣ
ವರವಾದನೆ ಚಂದಿರ

ಯಾವ ದಾಹ ಯಾವ ಮೋಹ
ಬಿಡಿಸಿ ಸುತ್ತ ಚಕ್ರವ್ಯೂಹ
ಇರುವ ತನಕ ಸುತ್ತಿ ಸುತ್ತಿ
ಸುಳಿಗೆ ಸಿಕ್ಕ ಚಂದಿರ

ಅರಿವಿಲ್ಲದ ಆಳದಲ್ಲಿ ಆಟವಾಡಬೇಡ
ಬಯಸಿದ್ದು ಸಿಕ್ಕಿದಷ್ಟು ಅತಿಯಾಸೆಬೇಡ
ಹಿಂದಿರುಗಿ ನೋಡೊ ಗೆಳೆಯ
ನೆನಪು ತರುವ ಚಂದಿರ

ಬೆಳಕರಿಯದ ಊರಿನಲ್ಲಿ
ಕತ್ತಲೆಂದು ಕದಲದು
ಹಸಿವಿಲ್ಲದ ಮನುಜನಲ್ಲಿ
ಬೆಳಕು ಬರದು ಚಂದಿರ

ಹುಚ್ಚು ಕುದುರೆ ಓಟದಲ್ಲಿ
ಕುರುಡಾಗಿದೆ ಪಯಣವು
ಎಡವಿಬಿದ್ದ ಸ್ಥಳದ ಸುಳಿವು
ಸಿಗಲಾರದೆ ಚಂದಿರ

ಇತಿಮಿತಿಗಳ ಇತಿಹಾಸ
ಬಲ್ಲವನೆ ಸಂತನು
ಎಲ್ಲೆ ಇರದ ಸಾಹಸಕೆ
ಸೈ ಎನ್ನುವ ಚಂದಿರ
Categories: ಕನ್ನಡ ಪುಟಗಳು

ಗದ್ದಲ

Tue, 2008-09-02 16:41
ಅದುಮಿಟ್ಟ ಹಂಬಲಗಳೊಟ್ಟಾಗಿ
ತತ್ತರಿಸಿದ ಚಿತ್ತ
ಸಿಡಿದ ಸದ್ದಿನ ಗದ್ದಲ
ಸುತ್ತ ಗಡಿಬಿಡಿ ಕೋಲಾಹಲ

ಘಟಿಸಿದ ಅನಾಹುತ
ತಟಸ್ಥ ಒಮ್ಮೆಗೆ
ನೀರವ ಮೌನ
ಅಲೆ ಅಲೆಯಾಗಿ ಪಯಣ

ಸ್ಧಿತ್ಯಂತರ ಕ್ಷಣದಲಿ
ದಿಗ್ಭ್ರಮೆ, ರೋದನ
ಸಾಂತ್ವನ ಸಾಲು ಸಾಲು
ಸಂದಿಗ್ಧ ಪರಿಸ್ಥಿತಿ

ಅಸಹಾಯ ಸನ್ನಿವೇಶ
ಸತ್ಯದ ದಿಗ್ದರ್ಶನ
ಆಧ್ಯಾತ್ಮ ಅಂತರಂಗ
ಹೊಸ ಅಧ್ಯಾಯದಾರಂಭ
Categories: ಕನ್ನಡ ಪುಟಗಳು

ಆಗ

Mon, 2008-08-25 16:06
ವೇಗದ ಮನವಿಡಿದು
ಜೋರು ಉಸಿರೆಳೆದು
ನಿಧಾನಗತಿಯಲ್ಲಿ ಹೊರಬಿಡಲು
ನಿರಾಳ ಅಂತರಾಳ

ಮನೆತುಂಬ ನೆಂಟರು
ಜೋರು ಗಲಾಟೆ, ಮಂಡೆ ಬಿಸಿ ,
ಹೋದ ನಂತರ
ಮನಸು ಹಗುರ - ಭಾರ

ಒಂದೇ ಸಮನೆ ಟೀವಿ ಹಚ್ಚಿ
ಧಾರಾವಾಹಿ ನೋಡುವ ಛಟ
ಕೃತಕ ಭಾವೋದ್ರೇಕ
ನಿಂತರೆ ಮನಃಶಾಂತಿ

ನಿಮಿಷಗಟ್ಟಲೆ ಕಾಯಿಸುವ
ಟ್ರಾಫಿಕ್ ಸಿಗ್ನಲ್ಸ್
ಕ್ಷಣ ಕ್ಷಣ ರಕ್ತದೊತ್ತಡ ಏರುಪೇರು
ಗ್ರೀನ್ ಲೈಟಿಂದ ಬದುಕಿದ ತೃಪ್ತಿ

ಬಂಪರ್- ಟು - ಬಂಪರ್
ಟ್ರಾಫಿಕ್ ಜಾ...ಮ್ !
ಶೃತಿ, ಲಯ ತಪ್ಪಿದರೆ ಧರ್ಮದೇಟು, ದಂಡ
ಗೆದ್ದರೆ ದೊಡ್ಡ ನಿಟ್ಟುಸಿರು
Categories: ಕನ್ನಡ ಪುಟಗಳು

ದಿನಚರಿ

Fri, 2008-08-22 18:19
ಪ್ರತಿದಿನ ಮೂರೊತ್ತು ಊಟ
ಹಗಲೆಲ್ಲ ಕೆಲಸ ,
ಗೆಳೆಯರೊಂದಿಗೆ ಹರಟೆ
ದಿನದ ವಿಶೇಷವೆ?

ಮಡದಿಯೊಂದಿಗೆ ಜಗಳ, ಮುನಿಸು ,
ಪಿಸುಮಾತು, ಸಿಹಿಮುತ್ತು ,
ಎದುಸಿರು, ನಿಟ್ಟುಸಿರು
ಸಮರ್ಥ ನಿರ್ವಹಣೆಯೆ?

ಮಗುವೆಬ್ಬಿಸಿ, ಹಲ್ಲುಜ್ಜಿ
ಹಾಲುಣಿಸಿ, ಸ್ನಾನ ,
ಶಾಲೆಯ ತಯಾರಿಯೊಂದಿಗೆ
ದಿನದ ಜವಾಬ್ದಾರಿ ಮುಗಿಯಿತೆ?

ಹೇಗಿತ್ತು ದಿನ, ಊಟವಾಯಿತೆ ,
ಆರೋಗ್ಯವೇಗಿದೆ, ಇನ್ನೇನು ಸಮಾಚಾರ ,
ಪ್ರಶ್ನೆಗಳೊಂದಿಗೆ ,
ಅಮ್ಮನ ಆರೈಕೆ ಸಾಕೆ?

ದಿನಸಿ, ತರಕಾರಿ, ಕರೆಂಟು ಬಿಲ್ಲು
ಸಂಜೆ ಮಡದಿ ಮಗುವೊಂದಿಗೆ
ಸಿನಿಮಾ, ತಿಂಡಿ, ತಿರುಗಾಟ
ಬದುಕಿಷ್ಟು ಸರಳವೆ?
Categories: ಕನ್ನಡ ಪುಟಗಳು

ಮತ್ತೆ ಬರುವನು ಚಂದಿರ

Tue, 2008-08-19 15:43
ಆರೋಹ, ಅವರೋಹವದ್ಭುತ
ಶೃತಿ, ಲಯವ ಬಿಡದ ಸುತ
ಜಗದ ನಿಯಮ ಪಾಲಿಸುವ
ವಿನಯವಂತ ಚಂದಿರ

ಸುರಿವ ಮಳೆಯೆ ಸಂಗೀತ
ಜಾರಿ ಬರುವ ಸ್ವರದ ಹಿತ
ರಾಗ ಯಾವುದಾದರೇನು
ಕೇಳಿ ಕುಣಿವ ಚಂದಿರ

ಅವನ ಅವಳ ನಡುವೆ ಜಗಳ
ನೋಡಿ ನಲಿವ ಕುತೂಹಳ
ವಿರಸ ಕಳೆದು ಸರಸ ಸೆಳೆದ
ಕ್ಷಣಕೆ ಮಾಯ ಚಂದಿರ

ಕಳೆದ ನಿನ್ನೆ, ಸಿಗದ ನಾಳೆ
ಬೇಕೆ ನಮಗೆ ಅವರ ರಗಳೆ
ಇರುವ ಇಂದು ಈಗಲೇ
ನಿಜವು ನಮಗೆ ಚಂದಿರ

ಜಾರಿ ಬಿದ್ದರೇನು ಚಿಂತೆ
ಎದ್ದು ಬರುವ ಎಂದಿನಂತೆ
ಬಿದ್ದು ಎದ್ದು ನಿಂತ ಮೇಲೆ
ಗೆದ್ದು ಬರುವ ಚಂದಿರ

ಬಿಳಿಯ ಹಾಳೆಯ ಮೇಲೆ
ಬೆಳೆದು ನಿಂತ ಭಾವಗಳೆ
ಭಾರವಾಗದಿರಿ ಎಚ್ಚರ
ಹೊರಲಾರನು ಚಂದಿರ

ಬಿಸಿಲು, ಮಳೆ, ಚಳಿಯ ಹಾಗೆ
ಬದಲಾಗುವ ಬಯಕೆ ಏಕೆ
ಹಣ್ಣಾಗುವ ಮೊದಲೇ ಮಣ್ಣಾಗ
ಬೇಕೆ ಚಂದಿರ

ಗಂಡು ಹೆಣ್ಣು ಜಗದ ಕಣ್ಣು
ಧರೆಗೆ ದೇಹ ಹಸಿರು, ಮಣ್ಣು
ಉಸಿರಿಗಿರಲು ಗಾಳಿ, ನೀರು
ಬೇರೆ ಬೇಕೆ ಚಂದಿರ

ಆದಿ, ಅಂತ್ಯ ನೆಪಕೆ ಮಾತ್ರ
ಮರಳಿ ಬರಲು ಬೇರೆ ಪಾತ್ರ
ಇರುವ ಮೂರು ದಿನವು ನಟಿಸಿ
ಇಹವ ತೊರೆಯೋ ಚಂದಿರ

ಒಂದು, ಎರಡು, ಮೂರು, ನಾಕು
ದಾರಿ, ನೆರಳು, ಬೆಳಕು ಬೇಕು
ಬಯಸಿ ಬಂದ ಭಾಗ್ಯ ಸವಿದು
ವಂದಿಸುವೆನೋ ಚಂದಿರ
Categories: ಕನ್ನಡ ಪುಟಗಳು

ಅಳುತ್ತಿದೆ

Wed, 2008-08-13 11:12
ಮಗು ಅಳುತ್ತಿದೆ ಆಗಿನಿಂದ
ರೆಪ್ಪೆ ಒತ್ತಿದಷ್ಟೂ ಹೊಮ್ಮುವ
ಕಣ್ಣೀರ ಕಾಲುವೆ ಕೆನ್ನೆಮೇಲೆ
ಕಾಲ್ದಾರಿಯಂತೆ

ಮಿತಿಮೀರಿದ ಮುಗ್ಧತೆ
ಅಳುವಾಗಲೂ ಅಣಕಿಸುವುದೇ
ಅರಿವಿರದ ಮಗುವು
ಅಳುವಿಂದ ಎಲ್ಲ ತಿಳಿಸುವುದೆ

ಸಜ್ಜನರ ಚಿತ್ತ
ಅವರವರ ಹಾದಿಯತ್ತ
ನೋಡಿಯು ನೋಡದಂತೆ
ನಿರ್ಲಿಪ್ತ ನೋಟ ಮಗುವತ್ತ

ವಿರಾಮವಿಲ್ಲದ ಅಳು
ಬೆಲೆಯಿಲ್ಲ ಕಂದ ಬೇಡಿದರು
ಹಸಿವೋ, ನೋವೋ
ಇಲ್ಲವೇ ಆಲಿಸುವ ಆಪ್ತರು

ಇದ್ದರು ಇಲ್ಲದ ಬದುಕು
ಆದರೂ ಬದುಕುವಾಸೆ ಆಗಸದಷ್ಟು
ಕಂದ ಅಳುತ್ತಲೇ ಇರು ಅರಿಯುವವರೆಗೆ
ಸಂತೈಸಲು ಇಲ್ಲಿ ಯಾರಿಲ್ಲ
Categories: ಕನ್ನಡ ಪುಟಗಳು

ಮತ್ತೆ ಮೂಡಿ ಬರುವನು ಚಂದಿರ

Tue, 2008-08-05 11:52
ರವಿಯು ಏರಿ ದಿನವು ಹಾರಿ
ಬೆಳಕು ಕರಗಿದ ನಂತರ
ಮತ್ತೆ ಮೂಡಿ ಬರುವನು ಚಂದಿರ

ಪ್ರತಿ ಪುಟವ ತಿರುಗಿಸಿ
ಆ ಕಥೆಯು ಮುಗಿಸಿದ ನಂತರ
ಮತ್ತೆ ಹೊಸ ಕಥೆಯ ಬರೆಯುವ ಚಂದಿರ

ದೇವ, ದಾನವನಿವನೆ ಮಾನವ
ಮತದ ಹೆಸರಲಿ ಮತಿಯ ಕೆಡಿಸುವ
ಮತಕೆ ಮತಿಗೆ ಹಣತೆ ಬೆಳಗುತ
ನಗುತಲಿರುವನು ಚಂದಿರ

ದೇಶಕಾಲದ ಪರಿಗೆ ಮಾಗದೆ
ಹಲವು ಋತುಗಳ ಕೈಗೆ ಸಿಗದೆ
ಅವನ ಕಾಯಕ ಕರ್ಮ ನಿಷ್ಠೆಗೆ
ಬದ್ಧನಾಗಿ ನಡೆವ ಚಂದಿರ

ಸೃಷ್ಠಿಕರ್ತನೆ ಸೂತ್ರಧಾರಿ
ಜಗವೆ ಅವನಿಗೆ ಪಾತ್ರಧಾರಿ
ಎಲ್ಲೆ ಮೀರದೆ ನಡೆದ ದಾರಿ
ಪರಿಧಿಯೊಳಗೆ ಚಂದಿರ

ನೋವು ನಲಿವುಗಳೆಲ್ಲ ಸಹಜ
ಬೆಳಕು ಕತ್ತಲು ಖಚಿತ ಮನುಜ
ಚಿಂತೆ ಮಾಡುತ ಸಂತೆ ಕಂತೆಯ
ನಿಶ್ಚಿಂತೆ ಸಿಗುವುದೆ ಚಂದಿರ

ವಿವಿಧ ಒತ್ತಡ ಬಿತ್ತಿ ದಿನವು
ಹೊರೆಗೆ ಬತ್ತಿದಂತೆ ಜಗವು
ಸರಳ ಜೀವನ ಮಂತ್ರ ಜಪಿಸಿ
ಮುಕ್ತಿ ಕೊಡುವನು ಚಂದಿರ

ಕತ್ತಲಲ್ಲಿ ಕದವ ಕದಲಿಸಿ
ಕಾದ ಕಾವಲಿಗೆ ಕಾವ ಕರಗಿಸಿ
ಬೆಳಗಾದ ನಂತರ ಸಂತನೆಂದರೆ
ಸುಮ್ಮನಿರುವನೆ ಚಂದಿರ

ರಾಗ, ದ್ವೇಷಗಳಲವು ಒಳಗೆ
ಕುಣಿಯುತಿರಲು ಕೊನೆಯವರೆಗೆ
ಸಾಧು ಸಂತನ ಮುಖವಾಡವಿಟ್ಟರೆ
ಕ್ಷಮೆಯು ಕೊಡುವನೆ ಚಂದಿರ

ಎದೆಯ ಮೇಲೆ ಒದೆವ ಕಂದನ
ಮನೆಯಲಿರಳು ಬಾಳು ನಂದನ
ಮುಗ್ಧ ಮನಸಿಗೆ ಮಾರು ಹೋದವ
ನಿಂತು ನಗಿಸುವ ಚಂದಿರ

ಇರುವುದೆಲ್ಲವ ಮರೆತು ಹಿಂದೆ
ನಡೆದು ಹೋಗಲು ಹಾದಿ ಮುಂದೆ
ಹೊಸತು ಜಗವ ದಿನವು ತೆರೆವ
ಸಾಕ್ಷಿ ಅವನೇ ಚಂದಿರ

ಸಪ್ತ ಸ್ವರಗಳ ರಾಗಲಹರಿ
ಸುಪ್ತ ಭಾವದ ನವಿಲ ಗರಿ
ಶಾಂತಿ ಚಿತ್ತದಿ ಹರಿವ ನದಿಗೆ
ತೃಪ್ತನಾಗುವ ಚಂದಿರ

ಆಸೆ ಕುದುರೆಯನೇರಿ ಬರುವ
ನಿರಾಸೆಯಾದರೆ ಖಿನ್ನನಾಗುವ
ಅವತರಿಪ ಆಸೆಗೆ ಕಡಿವಾಣವಿರಿಸಿ
ಸರಸ ಕಲಿಸುವ ಚಂದಿರ

ಉರಿವ ಬೆಂಕಿಗೆ ತೈಲವೆರೆಯುತ
ಮದ, ಮತ್ಸರಗಳಿಂದ ನರಳುತ
ಇರುವ ಕ್ಷಣಗಳ ಮರೆತ ಜನರ
ಕಣ್ಣು ತೆರೆಸುವ ಚಂದಿರ

ಮೋಡ ಕವಿದರು ನುಸುಳುವವನು
ಅಮ್ಮನಿಗೆ ಇವ ಆಪ್ತ ಗೆಳೆಯನು
ಅಳುವ ಕಂದನ ನಗಿಸುವವನು
ಅಡಗಿರುವನೆಲ್ಲಿ ಚಂದಿರ

ದಿನವು ಹಲವು ವೇಶ ಧರಿಸಿ
ದೇಶ ದೇಶಗಳೆಲ್ಲ ಪಯಣಿಸಿ
ದಣಿದ ದೇಹವ ತಣ್ಣಗಿರಿಸಿ
ಹಾರಿ ಹೋಗುವ ಚಂದಿರ

ಒಳಿತು ಕೆಡುಕು ನೋಡುತಿರುವ
ಬಿಸಿಲು ಮಳೆಗೆ ತಣಿಯದಿರುವ
ಆಗಸಕೆ ಅಂದ ನೀಡಿದ
ಚತುರ ಇವನೆ ಚಂದಿರ

ಕೋಪವೆಂಬ ಧೂರ್ತನನ್ನು
ಕಂಡ ಕ್ಷಣವೆ ಕರಗಿಸುವನು
ಸಂಯಮದಿ ಸಹಿಸುತ ಎಲ್ಲವ
ಹಿತವ ನುಡಿಯುವ ಚಂದಿರ

ಸಪ್ತ ಸಾಗರದಾಚೆಗೆಲ್ಲೋ
ನಿತ್ಯ ಹಸಿರಿನ ದಟ್ಟ ಕಾಡಲಿ
ಕಳೆದು ಹೋಗುವ ಹಂಬಲಕ್ಕೆ
ಬೆಂಬಲ ನೀಡುವ ಚಂದಿರ

ತಾನು ತನ್ನದೆ ಎಲ್ಲ ಎಂದರು
ತಾನೆ ಎಲ್ಲವ ಬಲ್ಲೆನೆಂದರು
ನಿಜವನರಿಯುವ ಸುಖದ ಸಿಹಿಯ
ನೀಡಿ ನಲಿವನು ಚಂದಿರ

ರವಿಯು ಏರಿ ದಿನವು ಹಾರಿ
ಬೆಳಕು ಕರಗಿದ ನಂತರ
ಮತ್ತೆ ಮೂಡಿ ಬರುವನು ಚಂದಿರ

ಪ್ರತಿ ಪುಟವ ತಿರುಗಿಸಿ
ಆ ಕಥೆಯು ಮುಗಿಸಿದ ನಂತರ
ಮತ್ತೆ ಹೊಸ ಕಥೆಯ ಬರೆಯುವ ಚಂದಿರ
Categories: ಕನ್ನಡ ಪುಟಗಳು

ದಿವ್ಯ ಮಿಲನ

Sat, 2008-08-02 15:11
ಕದವ ತೆರೆದು ಹೊಳೆವ ಮೊಗದಿ
ಅರಳಿ ನಿಂತಿದೆ ಸಂಪಿಗೆ
ಬರುವುದೆಂತೋ ದುಂಬಿ ಹಾರಿ
ದಿವ್ಯ ಮಿಲನದಂಚಿಗೆ

ವಿರಹ ವೇದನೆ ಉಕ್ಕಿ ಬರಲು
ಸುಗಂಧ ಪರಿಮಳ ಸೆಳೆದು ತರಲಿ
ಒಳಗೆ ಮಿಂದು ತೇಲಿ ಹಾರಲಿ
ಎದೆಯಾಳದ ಕಡಲ ತೀರದಲ್ಲಿ

ಗೆಳೆಯ ಬರುವನು ಈಗಲೇ
ತೇಲಿ ಬಿಡುವೆನಾಕ್ಷಣದಲೇ
ದಾರಿ ತಪ್ಪಿ ತಡವಾಗದಿರಲಿ
ಕಾದಿರುವೆ ನಲ್ಲ ತುದಿಗಾಲಲಿ

ಸುರಿವ ಮಳೆಯೇ ಸುಪ್ರಭಾತ
ಬೆಳಗಿ ತಾರೆಗಳಿಂದ ಸ್ವಾಗತ
ಮರೆತಾಗ ಕರೆಯುವ ಚಂದಿರ
ನೀನೋಡಿ ಬಾರೋ ಹತ್ತಿರ

ಕೆರಳಿರುವ ಕುತೂಹಲ ಕರಗದಿರಲಿ
ಅರಳಿರುವ ನಗುವು ಬಾಡದಿರಲಿ
ಕಳೆದ ಕ್ಷಣಗಳು ಕಾಡದಿರಲಿ
ಈ ನಿರೀಕ್ಷೆ ಹುಸಿಯಾಗದಿರಲಿ
Categories: ಕನ್ನಡ ಪುಟಗಳು

ಈ ನಗರಕ್ಕೇಕೆ?

Thu, 2008-07-31 12:39
ಈ ನಗರಕ್ಕೇಕೆ ?
ಬೇಸರ
ನಿರಾಸೆ
ನಿರುತ್ಸಾಹ

ಈ ನಗರಕ್ಕೇಕೆ ?
ಒತ್ತಡ
ಹೊರೆ
ವೇಗ

ಈ ನಗರಕ್ಕೇಕೆ ?
ಶಬ್ದ ಮಾಲಿನ್ಯ
ವಾಯು ಮಾಲಿನ್ಯ
ತ್ಯಾಜ್ಯ ಮಾಲಿನ್ಯ

ಈ ನಗರಕ್ಕೇಕೆ ?
ನೀರಿನ ಅಭಾವ
ಬೆಳಕಿನ ಅಭಾವ
ಹಸಿರಿನ ಅಭಾವ

ಈ ನಗರಕ್ಕೇಕೆ ?
ತರಕಾರಿ ತುಟ್ಟಿ
ಬಾಡಿಗೆ ತುಟ್ಟಿ
ದಿನಸಿ ತುಟ್ಟಿ

ಈ ನಗರಕ್ಕೇಕೆ ?
ಕೋಮು ಗಲಭೆ
ಉಗ್ರರ ಧಾಳಿ
ಹಿಂಸೆ, ದ್ವೇಷ

ಈ ನಗರಕ್ಕೇಕೆ ?
ಅನಾರೋಗ್ಯ
ಅಯಾಸ
ಅಶಾಂತಿ

ಈ ನಗರಕ್ಕೇಕೆ ?
ದೌರ್ಜನ್ಯ
ಆಕ್ರೋಶ
ಆಕ್ರಂದನ

ಈ ನಗರಕ್ಕೇಕೆ ?
ಏಕೆ ?
ಏಕೆ ?
ಏಕೆ ?
Categories: ಕನ್ನಡ ಪುಟಗಳು

ಮತ್ತೆ ಮೂಡಿ ಬರುವನು ಚಂದಿರ

Tue, 2008-07-29 14:54
ರವಿಯು ಏರಿ ದಿನವು ಹಾರಿ
ಬೆಳಕು ಕರಗಿದ ನಂತರ
ಮತ್ತೆ ಮೂಡಿ ಬರುವನು ಚಂದಿರ

ಪ್ರತಿ ಪುಟವ ತಿರುಗಿಸಿ
ಆ ಕತೆಯು ಮುಗಿಸಿದ ನಂತರ
ಮತ್ತೆ ಹೊಸ ಕತೆಯ ಬರೆಯುವ ಚಂದಿರ

ಉರಿವ ಬಿಸಿಲಿಗೆ ಸುಡುವ ಒಡಲ
ಬೆವರು ಇಂಗಿಸಿ ನಗಿಸೊ ಚೋರ
ನೊಂದ ಮನದಿ ಬೆಂದ ಬಾಳನು
ಹಸನು ಮಾಡುವ ಚಂದಿರ

ಗುಡುಗು ಮಿಂಚು ಸಿಡಿಲ ಸಾಲು
ಧರೆಗೆ ಧಾರೆ ಮೋಡ ಕರಗಲು
ಕವಿದ ಕತ್ತಲು ಬೆತ್ತಲಾದರೆ
ಹಣತೆ ಬೆಳಗುವ ಚಂದಿರ

ರವಿಯು ಏರಿ ದಿನವು ಹಾರಿ
ಬೆಳಕು ಕರಗಿದ ನಂತರ
ಮತ್ತೆ ಮೂಡಿ ಬರುವನು ಚಂದಿರ

ಪ್ರತಿ ಪುಟವ ತಿರುಗಿಸಿ
ಆ ಕತೆಯು ಮುಗಿಸಿದ ನಂತರ
ಮತ್ತೆ ಹೊಸ ಕತೆಯ ಬರೆಯುವ ಚಂದಿರ

ಅಂತರಾಳದಿ ಅಡಗಿಸಿರುವ
ಸತತ ಸೋಲಿನ ಕಹಿಯ ಭಾವ
ಬೆಳದಿಂಗಳ ವಿಸ್ಮಯದ ಮೋಡಿಗೆ
ತಂಗಾಳಿಯಂತೆ ನಗುವ ಚಂದಿರ

ದಣಿದು ದಾಹಕೆ ಬಿರುಕು ಬಿಟ್ಟಿದೆ
ಮೊಗ್ಗು ಅರಳದೆ ಜಾರಿ ಬಿದ್ದಿದೆ
ಹಸಿರು ಹೊದಿಸಿ ಹೊಸತು ಚಿಗುರಿಗೆ
ಉಸಿರು ನೀಡುವ ಚಂದಿರ

ರವಿಯು ಏರಿ ದಿನವು ಹಾರಿ
ಬೆಳಕು ಕರಗಿದ ನಂತರ
ಮತ್ತೆ ಮೂಡಿ ಬರುವನು ಚಂದಿರ

ಪ್ರತಿ ಪುಟವ ತಿರುಗಿಸಿ
ಆ ಕತೆಯು ಮುಗಿಸಿದ ನಂತರ
ಮತ್ತೆ ಹೊಸ ಕತೆಯ ಬರೆಯುವ ಚಂದಿರ
Categories: ಕನ್ನಡ ಪುಟಗಳು

ಭಾರ

Mon, 2008-07-28 16:04
ಅಬ್ಬಾ! ಇಲ್ಲಿಯವರೆಗೂ ಬಂದಾಯಿತು
ಎಷ್ಟೊಂದು ಭಾರ ಹೊತ್ತು
ದ್ವೇಷ, ಅಸೂಹೆ, ಅತೃಪ್ತಿ,ಅಸಹಾಯಕತೆ ,
ಅಸಮಧಾನ, ಕೋಪ, ಅಬ್ಬಬ್ಬಾ ...

ಒಂದೇ, ಎರಡೇ ಲೆಕ್ಕವಿಲ್ಲದಷ್ಟು
ಎಲ್ಲವೂ ಅನಗತ್ಯ, ಅನಾರೋಗ್ಯ, ಬೇಸರ
ನೆನೆದರೆ ಮತ್ತಷ್ಟು ಖಿನ್ನತೆ
ಮತ್ತೆ ಕೃತಕ ಅಮಲಿಗೆ ಶರಣು

ಮುಖಾಮುಖಿಗೆ ಧೈರ್ಯವೆಲ್ಲಿದೆ ?
ಎಲ್ಲವೂ ಅಸ್ಪಷ್ಟ
ಇನ್ನುಳಿದ ಹಾದಿ ಎಲ್ಲಿಯವರೆಗೆ
ಖಚಿತ ನಿರ್ಧಾರ ಅಸಾಧ್ಯ

ಬೆರಳು ತೋರುವುದು ಸುಲಭ
ದೂರಲು ನೂರಾರು ಕಾರಣಗಳ ಬೆಂಬಲ
ಹೊರಗೆ ಹುಡುಕಿದ್ದೇ ಸತತ ,
ಒಳನೋಟ ಅಪರಿಚಿತ

ಮೇಲ್ಪದರದಲ್ಲೇ ಪಯಣ
ಹಾದಿಯ ಎರಡು ಬದಿ ಬಣ್ಣ, ಬಣ್ಣ
ರುಚಿ ನೋಡುವ ಅಭ್ಯಾಸ
ಯಾಕೋ ತಿಳಿಯದು ಈ ಧಾವಂತ ?

ಅಂತರಂಗದಾಳದರಿವು
ಬಹಿರಂಗ ಮಾರ್ಗದ ನೆರವು
ಸೂಕ್ಷ್ಮಗಳ ಸೆಳವಿನ ಅನುಭೂತಿ
ಪಡೆಯದೇ ದೊರಕುವುದೆ ಮುಕ್ತಿ ?
Categories: ಕನ್ನಡ ಪುಟಗಳು

ಎಂದು ಬರುವಳು?

Sat, 2008-07-26 17:29
ಕಣ್ಸನ್ನೆಯಲೇ ಕುಶಲವ ಕೇಳಿ ?
ತುಟಿಯಂಚಿನಲಿ ಪ್ರಶ್ನೆಗಳ ಸೆರೆಹಿಡಿದು ,
ಬಿರುಗಾಳಿ ಎಬ್ಬಿಸಿ ,
ಮಿಂಚಂತೆ ಮಾಯವಾದಳು ಎಲ್ಲಿಗೆ ?

ಪಾರದರ್ಷಕ ಪ್ರತಿಬಿಂಬ ,
ನಿಶ್ಚಲ ನೀರಿನಂತಿದ್ದ ಮನಕೆ ,
ಹಿತವಾದ ಅನುಭವ ,
ಕಂಪಿಸುವ ಕಂಪನಗಳ ರೋಮಾಂಚನ !

ಅಸ್ಪಷ್ಟದ ಅಲೆಗಳ ಅಬ್ಬರಕೆ
ಲೀನವಾಗಿ, ಮರೆಯಾಗಿ ಜೊತೆಗೆ ,
ಹಿಡಿದಿಟ್ಟ ಪ್ರಶ್ನೆಗಳ ಎಸೆಯಲಿಲ್ಲವೇಕೆ ?
ಮತ್ತೆ ಬೇಟಿಯಾಗುವೆನೆಂಬ ಅವಳ ನಂಬಿಕೆ ?

ಅಂತರಂಗದಾಳದಲಿ, ಅವಳ
ಮನದ ತಳಮಳಗಳಲಿ ತುಂಟ ಕಚಗುಳಿ
ಇಟ್ಟವನು ನಾನೇನು ?
ನಲ್ಲೆ ನನಗಾಗಿ ಕಾದಿರುವಳೇನೋ ?

ಕ್ಷಣಕೆ ಸೆರೆಸಿಕ್ಕ ಅದ್ಭುತ ಕಲಾಕೃತಿ ,
ಸ್ಥಿರವಾಗಿ ಮನಸ್ಪುಟದಲ್ಲಿ ನೆಲೆಸಿ
ಮರೆಯುವ ಯತ್ನ ಮತ್ತೆ ಮತ್ತೆ ಸೋತಿದೆ ?
ಊಹೆಗಳು ದುಂಬಿಗಳಾಗಿ ಗಿರಕಿ ಹೊಡಿಯುತ್ತಿದೆ ?

ಕಾಣದ ನದಿಯಲ್ಲಿ ಮುಳುಗಿರುವೆನೇಕೆ ?
ಬೇರೆಡೆಗೆ ಮನವ ಸೆಳೆಯಲಾರೆನೇಕೆ ?
ಹೊರ ಜಗವು ಬತ್ತಿ ಬರಿದಾಯಿತೇಕೆ ?
ಇವಳ ಜೊತೆಗಿರುವ ಬಯಕೆ ನನಗೇಕೆ ?

ಹೇಗಿರುವಳೋ, ಎಲ್ಲಿರುವಳೋ, ಯಾರ ಮಗಳೋ ,
ಮಾತಿಲ್ಲ, ಸುಳಿವಿಲ್ಲ, ಹೆಸರು ಗೊತ್ತಿಲ್ಲ ?
ನನ್ನ ನಿತ್ಯ ಪಯಣವ ಕಟ್ಟಿ ಕಾಣೆಯಾದವಳು ?
ಈ ಒಗಟು ಬಿಡಿಸಳು, ಅವಳೆಂದು ಬರುವಳು ?
Categories: ಕನ್ನಡ ಪುಟಗಳು

ಅನಂತ

Wed, 2008-07-23 17:30
ಈ ಅನಂತ
ಮೌನ
ಚಿಂತನ, ಮಂಥನ
ಚಿರಯೌವನ

ಬಿರುಗಾಳಿಗೆ ಮೈಯೊಡ್ಡಿ
ಭೋರ್ಗರೆವ ಅಲೆಗಳ
ಮೇಲೆ
ರುದ್ರನರ್ತನ

ಕಾಲಗರ್ಭದ ಮಿತಿ
ಭಾವ, ಬಂಧು
ಸಿಂಧೂರ ಸೌಂಧರ್ಯ
ನಿಸರ್ಗ ಚಿತ್ತದ ಜೊತೆ ಸರಸ

ಈ ಹಾದಿಯಲ್ಲಿಲ್ಲ
ಕಲ್ಲು, ಮುಳ್ಳು
ಸಾಲು ಮರಗಳ
ನೆರಳು

ಪಾಪಿಷ್ಟ, ಕೋಪಿಷ್ಟ
ಸಾಧು, ಸಂತ
ಇಳೆಗೆ ಎಲ್ಲವೂ
ಮೀಸಲು

ನೀರವ ಮೌನ
ಒಮ್ಮೆಗೇ
ಬಿರುಗಾಳಿಯ
ಆಕ್ರಂದನ

ಕ್ಷಣ, ಕ್ಷಣ ಎದುಸಿರು
ಹೊಸ ಉಸಿರು
ರಭಸದ ಜೋರು
ಮರಳಿ ಮತ್ತದೇ ಮೌನ
Categories: ಕನ್ನಡ ಪುಟಗಳು

ವಿಪರ್ಯಾಸ

Wed, 2008-07-23 15:02
ಮೋಡ ತಡೆದು
ಮಳೆ ಸುರಿಸಿದ
ಬೆಟ್ಟಕ್ಕೆ
ನೀರಿನ ಅಭಾವ

ಬೆಟ್ಟದಿಳಿಜಾರಿನಲಿ
ನೀರು ನಿಲ್ಲಲು
ಸಾಧ್ಯವೆ
ತಡೆಗೋಡೆ ವಿರಳ

ಕೆಳಗೆಲ್ಲೋ
ಕಟ್ಚಲೂ ಬಹುದೊಂದು
ಅಣೆಕಟ್ಟು
ಅದಕೇನು ಲಾಭ

ಆದರೂ ಅದಕೆ
ನಿಶ್ಚಿಂತೆ
ಇಲ್ಲವೇ ಕಿಂಚಿತ್ತು
ಹಸಿರಿನ ಕೊರತೆ

ಶಾಂತಿ, ನೆಮ್ಮದಿಗೆ
ಭಂಗವಿಲ್ಲ
ಸರಳ ಜೀವನ
ಅಲ್ಲವೇ ಅದ್ಭುತ

ಕುಡಿಯಲು ನೀರು
ಉರಿಬಿಸಿಲಿಗೆ ನೆರಳು
ಗುಂಡುಕಲ್ಲಿನಡಿ
ಬೀಸಲು ತಂಗಾಳಿ

ಜೀವಜಂತುಗಳಿಹವು
ಸಾವಿರ
ಕುತೂಹಲ ಕೆರಳಿಸುವ
ಕಾಲಹರಣ

ಏರುವ ರವಿ ,
ಜಾರುವ ಕವಿಗೆ
ಇಲ್ಲಿರುವುದೊಂದು
ವಿಶೇಷ ಸ್ಥಾನ
Categories: ಕನ್ನಡ ಪುಟಗಳು

ಟಗರು

Sat, 2008-07-12 11:24
ಊರಬ್ಬದ ಸಲುವಾಗಿ
ಬೆಳೆಸಿದ್ದ ಸಿದ್ದ
ಕೊಬ್ಬಿದ ಐನಾತಿ
ಟಗರೊಂದ

ಬೆಳಗಿಂದ ಸಂಜೆ
ಅದರದೇ ಖದರು
ಸ್ನಾನ, ಮಸಾಜು ,
ಹಸಿ ಹಸಿ ಮೇವು

ಸಿದ್ದನೆಂಡತಿ ಸುಬ್ಬಿ
ಇದರ ಕಂಡಾಗವಳ
ಕಣ್ಣು, ಮೂಗು, ಮಖವೆಲ್ಲ
ಕೆಂಪು ಕೆಂಪು

ಇವಯ್ಯಂಗೆ ಹೊಟ್ಟೆಗಿಟ್ಟಿಲ್ಲ
ಜುಟ್ಟಿಗೆ ಮಲ್ಲಿಗಿ ಹೂ
ಹೆಂಡ್ತಿ ಯ್ಯಾಕ
ಟಗರನ್ನೆ ಆಗಬೇಕಿತ್ತು

ಉರಿದು ಬೀಳುವಳು
ಲಬ ಲಬ ಲಬ ಲಬ
ಕಿವಿಮುಚ್ಚಿ ಕುಂತ ಸಿದ್ದ
ಬೀಡಿ ಹಚ್ಚುವಾಸೆ ತೊರೆದು

ಟಗರಿನ ಇಚಾರ
ಊರ ಮಂದೀಗೆ ಕರೆದೇಳ್ತಾನ
ನನ್ನ ಇಸ್ಯ ಇವನ
ಬಾಯಿಗ್ಬರಂಗೇಯಿಲ್ಲ

ಹಬ್ಬ ಹತ್ತಿರವಾದಂತೆ
ಸಿದ್ದ ಸಪ್ಪಗಿದ್ದ
ಅಂದು ಟಗರೆಳೆದೊಯ್ದಾಗ
ಅಂವ ಬಿಕ್ಕಿ ಬಿಕ್ಕಿ ಅತ್ತಿದ್ದ

ಸುಬ್ಬಿ ಕಣ್ಣಂಚು ಒದ್ದೆ ಒದ್ದೆ
ಕೈಹಿಡಿದು ಒಳಗೊಯ್ದು
ಮಮತೆ ಮಾಗಿದ ಕ್ಷಣ
ಎದೆಗೊತ್ತಿ ಮಲಗಿ ಸಮಾಧಾನ
Categories: ಕನ್ನಡ ಪುಟಗಳು

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator